ಮೌನದ ಮಾತುಗಳು . .

ಹೀಗೊಂದು ದಿನ ನಾವೆಲ್ಲಾ ಶಾಲೆಯಲ್ಲಿ ಪಾಠ ಕೇಳುತ್ತಿದ್ದಾಗ ಒಂದು ಸಂದೇಶ ಬಂದಿತು ಏನು ಅಂತಾ ಎಲ್ಲರು ಕುತೂಹಲದಿಂದ ಮೈಲೆಲ್ಲಾ ಕಿವಿಯಾಗಿಸಿಕೋಂಡು ಕಾಯುತ್ತಿರುವಾಗ ಮೇಷ್ಟ್ರು ಹೇಳಿದ್ರು ನಮ್ಮ ಶಾಲೆಯ ಯಾರೋ ಹಳೆಯ ಗುರುಗಳು ಕೈಲಾಸವಾಸಿಯಾಗಿದ್ದಾರೆ ಅದಕ್ಕೆ ಮೌನಾಚರಣೆಗೆ ಕೊನೆಯ ಪಿರಿಡ್ ಇರುವುದಿಲ್ಲ ಎಂದು.ಅದನ್ನು ಕೇಳಿದ ನಾವೆಲ್ಲಾ ಸಂತೋಷಗೊಂಡೆವು , ಸಧ್ಯಕ್ಕೆ ಪಿರಿಡ್ ಬಂಕ್ ಆಯಿತಲ್ಲಾ ಅನ್ನೋದೆ ವಿಷಯ ಇಲ್ಲಿ ಮೇಲು ಗೈ ಸಾಧಿಸಿತ್ತು.

ಮೌನಾಚರಣೆ ಸಭೆಯ ಮುತ್ಸದ್ದಿತನ ಹೊಂದಿದ್ದ ನಮ್ಮ ಜೋಶಿ ಸರ್ ಬಂದವರನ್ನು ಕರೆದು ಕೂರಿಸುವಲ್ಲಿ ,ಹುಡುಗರನ್ನು ಸಾಲಾಗಿ ನಿಲ್ಲಿ ಅಂತಾ ಗರ್ಜಿಸುವುದರಲ್ಲಿ ,ಅದ್ಯಕ್ಷರನ್ನು ನೋಡಿಕೊಳ್ಳುವುದರಲ್ಲಿ ಹೀಗೆ ಹಿಂದೆ ಮುಂದೆ ಕೆಲಸದ ನೆಪದಲ್ಲಿ ಅಲೆಯುವುದರಲ್ಲಿ ತಮ್ಮೋಳಗಿನ ನಿರ್ವಾತವನ್ನು ನಿಗಿಸಿಕೊಳ್ಳುತ್ತಿದ್ದರು.ಸಹಜತೆಯನ್ನು ನುಂಗುವಷ್ಟು ಗಂಭೀರತೆಯನ್ನು ಎಲ್ಲರೂ ಹೊತ್ತುಕೊಂಡಿದ್ದರು.ಎಲ್ಲ ಬೇಗ ಮುಗಿದರೆ ಸಾಕು ಅನ್ನಿಸುವಷ್ಟು ಭಾರವಾಗಿತ್ತು ಆ ಸಭೆ.ಈ ತರಹದ ಸಭೆಗಳು ನಮಗೆ Common ಆಗಿದ್ದವು ಆ ಪಕ್ಷಮಾಸದಲ್ಲಿ. ಅಲ್ಲಲ್ಲಿ ಶಿಕ್ಷಕರು ಗುಂಪು ಕಟ್ಟಿಕೊಂಡು ತೀರಿಕೊಂಡವರ ಬಗ್ಗೆ ಮಾತಾಡುತ್ತಿದ್ದರು.ಬಂದಿದ್ದ ಎಲ್ಲ ವಿದ್ಯಾರ್ಥಿಗಳನ್ನು ಸಾಲಾಗಿ ನಿಲ್ಲಿಸಲಾಗಿತ್ತು ತಲೆ ಸುಡುವ ಬಿಸಿಲು ಹೇಗಲ ಮೇಳೆ ಹೇಣದಂಥಹ ಸ್ಕೂಲ್ ಬ್ಯಾಗ್ ಅಲ್ಲಲ್ಲಿ ಹುಡುಗರು ಧಾಂಲ್ಯೆ ಹಾಖುತ್ತಾ ಕಿರಚುತ್ತಾ ಇನ್ನೊಬ್ಬರಿಗೆ ಕಿಟಲೆಮಾಡುತ್ತಾ ನಿಂತಿದ್ದರು . ಇಷ್ಟರಲ್ಲಿ ಜೋಶಿ ಸರ್ ” ಈಗ ಎರಡು ನಿಮಿಶ ಮೌನ” ಎಂದು ಸಾರಿಯೆಬಿಟ್ಟರು.

ಕಿಲಿ ಗೊಂಚಲು,ಸ್ಕರ್ಟು,ಖುರ್ಚಿ,ಷೂ ಗಳು ಹಿಂದೆ ಮುಂದೆ ಸರಿದ ಸಾಮೂಹಿಕ ಸರಭರವೊಂದು ಅವಸರದಲ್ಲಾಗಿ ಈಗ ಎಲ್ಲರೂ ಎದ್ದು ನಿಂತಿದ್ದಾರೆ.ಮಾತಿಗೆ ಮುನ್ನ ಕ್ಯಾಕರಿಸಿ ಗಂಟಲು ಸರಿಪಡಿಸಿಕೊಳ್ಳುವಂತೆ ಈ ಮೌನಕ್ಕೂ ಕೆಲವರು ಸದ್ದಿನ ಸಿದ್ಧತೆ ನಡೆಸಿದ್ದಾರೆ.ಸರ್ವಾನುಮತದಿಂದ ಆಯ್ಕೆಗೊಂಡವರಂತೆ ನಮ್ಮ ಜೋಶಿ ಸರ್ ವೇದಿಕೆಯಲ್ಲಿ ಯಾವ ವಿಶೇಷ ಚಲನವಲನ ಇಲ್ಲದೆಯೂ,ಯಾರ ಹಂಗಿಲ್ಲದೇ ತಮ್ಮದೇ ಆದ ಸಮಾರಂಭ ಎಂಬಂತೇ, ತಮ್ಮ ಬಿಗಿಯಾದ ಮುದ್ರೆಯಲ್ಲೇ ಈ ಮೌನ ಶಾಲೆಯ ಸೂತ್ರಧಾರರಾಗಿ ಬಿಟ್ಟಿದ್ದಾರೆ.ಅವರ ಕೊರಳಿಗೆ ಬಿಗಿದ ಸಿಟಿ ಅವರ ಸೌಂದರ್ಯವನ್ನು ಇನ್ನಷ್ಟು ಬೆರಗುಗೊಳಿಸುತ್ತಿದೆ.ಎಲ್ಲರೂ ಈಗ ಅವರ ಮೊಗದಲ್ಲಿ ತಮ್ಮ ಬಿಡುಗಡೆಯ ಚಿನ್ಹೆಗಾಗಿ ಕಾಯುತ್ತಾ ನಿಂತಿದ್ದಾರೆ.ಯಾವ ಮುನ್ಸೂಚನೆಯೇ ಇಲ್ಲದೇ ಒಬ್ಬನು ಹೀಗೆ ಮೌನ ಸೂತ್ರದಾನಾಗುವುದು ಈ ಸಭೆಯ ಕುಚೋದ್ಯಗಳಲ್ಲೊಂದು.

“ಕ್ಷಣವೇ ಯುಗವಾಗುವುದು” ಎಂದು ಮನವರಿಕೆಯಾಗುತ್ತಿರುವಾಗ ಕೆಲ ವಿದ್ಯಾರ್ಥಿಗಳು ಕಿಸ್-ಪಿಸ್ ಎಂದು,ತಕ್ಷಣ ಯಾರೋ ’ಶ್ ’ ಎಂದು ಮೌನಕ್ಕೆ ಸಾಣೆ ಹಿಡಿಯುತ್ತಾರೆ.ಇನೂ ಕೆಲವರು ನುಮ್ಮನೆ ನಕ್ಕು ತಾವು ತಪ್ಪಿತಸ್ಥರಲ್ಲಾ ಅನ್ನುವಂತೆ ಫೋಸು ಕೊಡುತ್ತಿದ್ದಾರೆ, ಪಿನ್ ಡ್ರಾಪ್ ಸೈಲೆನ್ಸ್ ಗೊತ್ತಿಲ್ಲಾ, ಆದರೆ ಬಗ್ಗಿ ಏಳುವಾಗ ಕೆಲವರ ಸಡಿಲ ಕಿಸೆಯಿಂದ ತೊಡೆಯಿಂದ ಜಾರಿ ಬಿದ್ದ ಪೆನ್ನುಗಳು ಅವಕ್ಕೆ ಉಧಾಹರಣೆಗಳಾಗಿವೆ, ಎದ್ದು ನಿಂತವನಿಗೆ ಆ ಪೆನ್ನನ್ನು ಎತ್ತಿಕೊಳ್ಳುವುದೋ ಬೇಡವೋ – ಎಂಬಂಥ ಮೂಲಭೂತ ಶಂಕೆಗಳು ಶುರುವಾಗುತ್ತವೆ.ತುಂಬಾ ಹೃತ್ಪೂರಕ ಮೌನದಲ್ಲಿ ತಲೆ ತಗ್ಗಿಸಿ ಅವರೀಗ ಬರೇ ಕಣ್ಣುಗಳನ್ನಾಡಿಸಿ ಕಾಲುಗಳ ನಡುವೆ ಅಮೂಲ್ಯ ಪೆನ್ನನ್ನು ಅರಸುತ್ತಿದ್ದಾರೆ.ಅಬ್ಬ ಅಲ್ಲಿದೆ ಪೆನ್ನು.ಇನ್ನು ಮೌನ ನಿರಾತಂಕ.

ಇನ್ನು ಕೆಲವರಿಗೆ ವೇದಿಕೆಯ ಮೇಲಿನ ಮುಖಗಳ ಮೇಲೆ ಲಕ್ಷ್ಯ,ನೋಡನೋಡ್ತ ಮುಖವಷ್ಟೆ ಹಿಗ್ಗಿದಂತೆ ಕತ್ತಷ್ಟೆ ಸಣ್ಣದಾದಂತೆ ಹೀಗೆಲ್ಲ ವಿನ್ಯಾಸಗಳು ಬದಲಾಗುತ್ತ ಪರಿಚಿತ ಮುಖಗಳೇ ಬೇರೆಯಾಗಿ ತೋರಡುತ್ತಿವೆ.ಅರೆ ಆಗ ಪ್ರಾರ್ಥನಾ ಗೀತೆಗಾಗಿ ನಮಗೆ Order ಮಾಡಿದ ದೇಶಪಾಂಡೇ ಸರ್ ಇವರೆ ಏನು?ಆಗ! ಪ್ರವೇಷ ದ್ವಾರದಲ್ಲಿ ಹೊರಗೆ,ರಸ್ತೆಯಲ್ಲಿ ಬೈಕನಿಂದಿಳಿಯುತ್ತಾ ಯಾರದೋ ಕೈ ಕುಲುಕುತ್ತಾ ಗಹಗಹಿಸಿ ನಕ್ಕ ನಮ್ಮ ಲೋಕುರ್ ಸರ್ ಇವರೇ ಏನು? ಒಬ್ಬರಿಗಿಂತ ಒಬ್ಬರು ಬೇರೆ ಕಾಣುತ್ತಿದ್ದಾರೆ ಈ ಸುಡುವ ಬೀಸಿಲಿನ ಝಳಕ್ಕೆ ಮಂಕಾದ ಕಣ್ಣುಗಳಿಗೆ . ಮುಂದಿನ, ಸಾಲು ಸಾಲು ಬೆವೆತ ಕತ್ತುಗಳನ್ನು ನೋಡಿದರೆ ತಲೆ ಸುತ್ತಿದಂತಾಗುತ್ತಿತ್ತು.ಅವನ ಚಡಪಡಿಕೆ ಬೇರೆ,ಸೈಕಲ್ ಲಾಕ್ ಮಾಡಿದ್ದೇನೋ ಇಲ್ಲವೋ,ಕೀ ಜತೆಗೇ ಹೊರಗೆ ಬಿಟ್ಟು ಬಂದಂತೆ ಭಾಸ,ಆದರೂ ಅತ್ಯಂತ ಸ್ಲೋ ಮೋಷನ್ ನಲ್ಲಿ,ಹೂವರಳಿದಷ್ಟೇ ಅಗೋಚರವಾಗಿ ಅವನು ತನ್ನ ಎರಡೂ ಕೈಗಳಾನ್ನು ಹಗೂರ ತನ್ನ ತನುವಿನ ತುಂಬ ಓಡಿಸಿ ಕೀಗಾಗಿ ಸವರುತ್ತಿದ್ದಾನೆ.ತಲೆಯ ಹಿಂದಿನ ಭಾಗದಿಂದ ಜಾರಿದ ಒಂದು ಬೆವರಿನ ಹನಿ ಇಡೀ ಮೈಯನ್ನು ತಂಪು ಗೋಳಿಸಿದೆ . ಸೀನುಗಳನ್ನು ತೆಡೆದುಕೊಂಡವರು ವಿಚಿತ್ರ ದನಿಯಲ್ಲಿ ಸ್ಫೋಟಗೊಂಡು ಕುಂಯ್ ಗುಟ್ಟಿ ಇಡೀ ಸಂಭಾಗಣವೇ ’ಕ್ಯಾಸೀನ್ ಹೈ’ ಅನ್ನುವಂತಾಗಿದೆ.

ಈ ಮಧ್ಯೇ ಇನ್ನೋಂದು ಅಸ್ತಿತ್ವವಾದ ಪ್ರಶ್ನೆ : ಹುಡೂಗಿಯರ ಕಡೆಗೆ ನೋಡಬಹುದೇ?ಮೌನಕ್ಕೆಂದು ಎದ್ದ ತಕ್ಷಣ ಬಳೆ ತುಂಬಿದ ಕೈಗಳಿಂದ ಅವರು ತಂತಮ್ಮ ಸ್ಕರ್ಟಗಳನ್ನು ಸೊಂಟದ ಸಮೀಪ ತಡವಿ ಎಳೆದು ಅಡ್ಜಸ್ಟ ಮಾಡಿಕೋಂಡ ಸದ್ದು ಇನ್ನೂ ಇದೆ.ಕೂದಲನ್ನು ಕಿವಿಯ ಪಕ್ಕಕ್ಕೆ ಸರಿಸುತ್ತಾ ಬೆವರಿನ ಹನಿಗಳನ್ನು ಗಂಟಲಿನಿಂದಾ ಬಳಸಿ ಸ್ಕರ್ಟಗಳಿಗೆ ಒರಿಸಿದಾಗ ಒಂಥರಹ Freshness ಆಗುತ್ತಿವೆ ಅವರಿಗೆ . ಕ್ರಾಂತಿಕಾರಿ ಮಹಿಳೆಯೊಬ್ಬಳ ಬೆನ್ನಿನ ಬಳಿ,transparent Shirt ನಿಂದ ಬಿಳಿಯ ಪಟ್ಟಿಯೊಂದು ಕಾಣುತ್ತಿದೆ .ಅದು ಆಕೇಗೆ ತಿಳಿದು “ಶೀವನೇ ಕಾಪಾಡಯ್ಯಾ” – ಎಂದು ಮನದಲ್ಲಿ ಶೀವನನ್ನು ನೆನೆಯುತ್ತಿದ್ದಾಳೆ.ಕೆಲವರಂತೂ ಟಿಕೆಟ್ ಕಲೆಕ್ಟರ್ ಬಂದಾಗ ಟಿಕೆಟ್ಟಿಲ್ಲದವರು ಭಯಂಕರ ನಿದ್ದೆ ನಟಿಸುವಂತೆ ಮುಖ ಕಿವುಚಿ ಮೌನತಪ್ತರಾಗಿದ್ದಾರೆ.

ಕೆಲವು Teacher ಗಳು , ಸಮಾರಂಭ ಮುಗಿಯುವ ಹೊತ್ತಿಗೆ ಬಂದ ಪಿಕಪ್ ಮಾಡ್ತಿನಿ ಎಂದಿದ್ದ ಅವರ ಪತಿ ಪರಮೇಶ್ವರನ ಸುಳಿವಿಗಾಗಿ ಪ್ರವೇಷ ದ್ವಾರದತ್ತ ನೋಡುತ್ತಿದ್ದಾರೆ.ನೆಚ್ಚಿನ ಸೀರಿಯಲ್ ತಪ್ಪಲಿರುವ ಗಂಭೀರ ಕಾಳಜೀಯ ಮೂಡಗಳೂ ಈಗಾಗಲೇ ಕವಿದೆವೆ ಅವರ ಮನಗಳಲ್ಲಿ.

ವೇದಿಕೆಯ ಮೇಲಿನ ಮುಖ್ಯ ಅಥಿತಿಗಳಿಗೆ ಏನೋ ದೈಹಿಕ ಕಸಿವಿಸಿ ಶುರುವಾಗಿ ಅತ್ತಿತ್ತ ನೋಡೂತ್ತಿದ್ದಾರೆ.ಈ ಮೌನ ಶಾಲೆಯ ಸೂತ್ರದಾರ ನಮ್ಮ ಜೋಶಿ ಸರ್ ,ಬಿಟ್ಟರೆ ಮತ್ತೆ ಸಿಕ್ಕುವುದಿಲ್ಲ ಎನ್ನುವಂತೆ ಸೂತ್ರವನ್ನು ಬಿಗಿಯಾಗೇ ಹಿಡೀದುಕೊಂಡು ಈಗಳೋ, ಇನ್ನೆರೆಗಳಿಗೆಗೋ ಎಂಬಂತೆ ಎಲ್ಲರನ್ನು ತುದಿಗಾಲಲ್ಲಿ ಗಂಭೀರ ಸ್ವರೂಪದಲ್ಲಿ ಆಡಿಸುತ್ತಿದ್ದಾರೆ.ಅವರಿಗೆ ಕಾಲ ಜ್ನಾನದರಿವಿನ ಸೂಚನೆ ಕೊಡುವಂತೆ ಕೆಲವರು ತಮ್ಮ ಕೈ ಗಡಿಯಾರವನ್ನು ಸ್ಲೋ ಮೋಷನಲ್ಲೇ ನೋಡೂತ್ತಿದ್ದಾರೆ.ಇಲ್ಲ, ಅವರಿಗದರ ಅರಿವಿಲ್ಲ ಯಾಕೆಂದರೆ ಅವರು ವಾಚ್ ಕಟ್ಟುವುದೇ ಇಲ್ಲ .ಹಾಗಾದರೆ ಅವರಿ ಹೇಗೆ ಗೋತ್ತಾದೀತು.ಎರಡು ನಿಮಿಷ ಆಯಿತು ಅಂತ ಹೇಗೆ ತಿಳಿಯಬೇಕು ಅವರಿಗೆ.

ಕಣ್ಮುಚ್ಚಿಕೊಂಡರೆ ಮುಗಿಯಿತು.ಕಿವಿ ತುಂಬ ಅಶರೀರ ವಾಣಿಗಳು.”ಮಗನಾ,ಸಿಗರೇಟೂ ಕೊಡಲೇ”,”ಇದೇನ್ ನಡೆದೈತೋ ಒಳಗೆ?” – ಹೊರಗಿನ ಮಾಮಾನ ಅಂಗಡಿಯ ಸೌಂಡ ಟ್ರ್ಯಾಕು.ಹಾಯುವ ವಾಹನಗಳ ರಭಸದಲ್ಲಿ ತಿರುಚಿಕೊಂಡು ಬರುವ ಹಾಡಿನ ಚೂರು . ಮತ್ತು ಏನೋ ದೊಡ್ಡಕ್ಕೆ ಮಾತಾಡಿಕೊಂಡು ಬಂದ ಸಭಾಗೃಹದ ಪ್ಯೂನ್ ನಮ್ಮ ಗುಂಡು , ಹಠಾತ್ತನೆಈ ಶಪಿತ ಗಂಧರ್ವರನ್ನು ಕಂಡು ಅರ್ಧಕ್ಕೆ ನಿಲ್ಲಿಸಿದ ವಾಕ್ಯ.

ಸೂತ್ರಧಾರರ ಹಸಿವು ಹಿಂಗುವ ಲಕ್ಷಣ ತೋರುತ್ತಿಲ್ಲ.ಸಕಲ ಸಭಾಗೃಹದ ಕಣ್ಣೂ ಅವರ ಮೇಲಿದೆ.ಅವರ ಕಿಂಚಿತ್ ಹುಬ್ಬಿನ ಇಷಾರೆ ಸಿಕ್ಕರೂ ಸಾಕು ಮೌನ ಭಂಗವಾಗುತ್ತದೆ,ಇಲ್ಲ ಅವರು ಅವನತ ನೆತ್ರನಾಗಿಯೇ ಇದ್ದಾರೆ.ಮೇಜಿನ ಮೇಲಿಟ್ಟ ಮೃತರ ದೊಡ್ಡ ಭಾವಚಿತ್ರವನ್ನೇ ನಿಟ್ಟಿಸಿ ನೋಡಿದರೆ ಅದು ಸಣ್ಣಗೆ ತುಟಿ ಚಲಿಸಿ ಮುಗುಳು ನಕ್ಕಂತೆ “ನಾನು ಬದುಕಿದ್ದಾಗ ನೀವೆಲ್ಲ ಎಲ್ಲಿದ್ದಿರೋ ಮಾರಾಯಾ! ” – ಎಂದು ಕೇಳುತ್ತಿರುವಂತೆ ಭಾಸವಾಗುತ್ತಿದೆ.ಈ ಕ್ಷಣದಲ್ಲಿ ಮುಕ್ತ ಮುಗುಳುನಗೆಯ ಭಾಗ್ಯವಂತ ಆತ ಮಾತ್ರ ಅನಿಸುತ್ತಿದೆ.ಇಲ್ಲ,ಆತ ಮಾತ್ರ ಅಲ್ಲ,ಮತ್ತೋಬ್ಬನಿದ್ದಾನೆ ಇಲ್ಲಿ,ವೇದಿಕೆಯ ಪಕ್ಕ ಬಲಮೂಲೆಯಲ್ಲಿ ಪುಟ್ಟ ಮೇಜಿನ ಮೇಲೆ ಎಂಪ್ಲಿಫೈಯರ್, ಸೌಂಡ್ ಸಿಸ್ಟಮ್ ಇಟ್ಟೂಕೊಂಡು ಕಳೆದೊಂದು ತಾಸಿನ ಭಾಷಣಗಳುದ್ದಕ್ಕೂ ಭಾಷಣಗಾರರ ಧ್ವನಿಗಳನ್ನು ವರ್ದಿಸಿ,ವರ್ಧಿಸಿ,ಮೈಕುಗಳನ್ನು ಹಿಂದೆ ಮುಂದೆ ಅಡ್ಜಸ್ಟ್ ಮಾಡಿ ನಡು ನಡುವೆ ಕೂಂಯ್ಯೋ ಎಂದು ಊಳಿಡೂವ ಸ್ಪೀಕರುಗಳ ಕಿವಿ ಹಿಂಡಿ ಇಡೀ ಈ ಶೋಕಸಭೆಯ ಸಪ್ಪಳಗಳ ಮೆಲ್ವಿಚಾರಣೆ ನಡೆಸಿದವನು ನಮ್ಮ ಹಣಮಂತ ಮಾಷಾಳ್.ಈಗವನು ಏನು ಮಾಡಬೇಕು ಮೌನದ ಈ ರಾಜ್ಯದಲ್ಲಿ ಅವನಿಗೆಂಥ ಪಾತ್ರ.ನಿಲ್ಲಬೇಕೋ,ಕೂರಬೇಕೋ,ನಗಬೇಕೋ,ಅಳಬೇಕೋ ಎಂಬ ಯಾವ ಸಂದಿಗ್ಧಗಳೂ ಭಾದಿಸವನಂತೆ , ಅವನ ಈ ಎರಡು ನಿಮಿಷಗಳ ಮೌನವೇ ತನ್ನ ಏಕಮೇವ ವಿರಾಮ ಎಂದುಕೊಂಡು ಟೇಬಲಿನಡಿಗೆ ಕಾಲುಚಾಚಿ,ತಲೆಯ ಹಿಂಭಾಗಕ್ಕೆ ಕೈ ಕೊಟ್ಟು ಆರಾಮಾಗಿ ಖುರ್ಚಿಗೊರಗಿ ಕಿಟಕಿಯ ಹೊರಗೇ ನೋಡುತ್ತ ಕೂತುಬಿಟ್ಟಿದ್ದಾನೆ.ಈ ಮೌನ ಮುಗಿಯದಿರಲಿ ಎಂದು ಒಳಗೊಳಗೇ ಆಸೆ ಪಡೂತ್ತಿದ್ದಾನೆ ನಮ್ಮ ಹಣಮಂತ ಮಾಷಾಳ್ , ಈ ಕ್ಷಣಕ್ಕವನು ಸುಖಿ ಜೀವಿ .

Leave a Comment

Your email address will not be published. Required fields are marked *

Scroll to Top